ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಮಂಜುನಾಥ್ ಭಟ್

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ;

ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ

ಮಾಯಾ ಲೋಕದ ಕಿನ್ನರಿ!

ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್ .

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು

ಜಾತ್ರೆಯ ಜಂಗುಳಿಯೊಳಗೆ.....!

ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವ

Wednesday 28 November 2012

ಕಬ್ಬಿನ ರಸ ಬದುಕಿನ ಸವಿರಸ

ಮಳೆಗಾಲ ಮುಗಿದು ಇನ್ನೇನು ಚಳಿ, ಬೆಸಿಗೆ ಕಾಲದ ಹೊತ್ತು. ಮನುಷ್ಯನ ದಾಹ ಇಂಗಿಸಲು ತಂಪನೆಯ ಪಾನೀಯಗಳದ್ದೇ ಕಾರುಬಾರು ಅದರಲ್ಲೂ ಕಬ್ಬಿನ ರಸಕ್ಕೆ ಅಗ್ರ ಸ್ಥಾನ. ಬೇಸಿಗೆಯ ದಗೆಗೆ ತೃಷೆಯಾದಾಗ ತಂಪಾಗಿಸಲು ಕಬ್ಬಿನ ರಸ ಕುಡಿದರೆ ದಾಹ ತಣಿದು ಮನಸ್ಸು ಉಲ್ಲಾಸವಾಗುತ್ತದೆ. ಹಾಗಾಗಿ ಕಬ್ಬನ ರಸಕ್ಕೆ ಭಾರಿ ಡಿಮಾಂಡ್. ಇದನ್ನೇ ವೃತ್ತಿಯನ್ನಾಗಿ ನೆಚ್ಚಿ ಅದೆಷ್ಟೋ ಮಂದಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ತಮ್ಮ ಬದುಕಿನ ಬಂಡಿಯನ್ನು ಎಳೆಯಲು ಕಬ್ಬಿನ ರಸ ಅಂಗಡಿ ಇಟ್ಟು ಕೊಂಡಿದ್ದಾರೆ.
ಸುಮಾರು ಐವತ್ತು ವರ್ಷಗಳಿಂದ ಕಬ್ಬಿನ ಜ್ಯೂಸ್ ಅಂಗಡಿಯೊಂದು ಉಜಿರೆಯಲ್ಲಿದೆ. ಆ ಅಂಗಡಿಯ ಯಜಮಾನಿ ಮೀರಾ ಶೆಣೈ. ಉಜಿರೆಯ ಮುಖ್ಯ ರಸ್ತೆಯ ಬಸ್ ಸ್ಟ್ಯಾಂಡ್ ಎದುರುಗಡೆ ಕಾಣ ಸಿಗುವ ಶೆಣೈ ಜ್ಯೂಸ್ ಸೆಂಟರ್ಗೆ ಇವರೇ ವಾರಿಸುದಾರರು. ತನ್ನ ಗಂಡನ ಕಾಲಾದ ನಂತರ ಸ್ವಾವಲಂಬಿಯಾಗಿ ಬದುಕು ಕಟ್ಟಬೇಕೆಂಬ ಛಲದಿಂದ ಗಂಡನ ಕಾಯಕವನ್ನೇ ಮುಂದುವರಿಸಿ ಜೀವನದಲ್ಲಿ ಯಶ ಸಾಧಿಸುತ್ತಿರುವ ಸೃಜನಶೀಲ ಮಹಿಳೆ. ಅವರು 53ರ ಹರೆಯ
ಕಬ್ಬಿನ ರಸದ ವ್ಯಾಪಾರ ಅದರ ಹಾಲು ಕುಡಿದಂತೆ ಸಲೀಸಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಕೆಲಸಕ್ಕೆ ಜನರನ್ನು ಹೊಂದಿಸಬೇಕು, ಹಾಸನ ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರಿನಿಂದ ಕಬ್ಬುಗಳನ್ನು ಸಗಟಾಗಿ ಖರೀದಿಸಲು ಮೊದಲೇ ಕಾದಿರಿಸಬೇಕು. ಸಾರಿಗೆ ವೆಚ್ಚ ಕೆಲಸಗಾರರಿಗೆ ಸಂಬಳ ಹೀಗೆ ಎಲ್ಲವನ್ನೂ ಸಂಬಾಳಿಸಿಕೊಂಡು ಅಂಗಡಿ ನಡೆಸುವುದೆಂದರೆ ಕಷ್ಟಸಾಧ್ಯ. ಆದರೂ ಇವರು ಎಲ್ಲಾ ಒತ್ತಡವನ್ನೂ ನಿರಾಯಸವಾಗಿ ನಿವಾರಿಸಿ ಸುಮಾರು ಏಳು ವರ್ಷದಿಂದ ತನ್ನ ಪತಿಯ ಇಚ್ಛೆಯಂತೆ ಅವರ ಉದ್ಯೋಗವನ್ನೇ ಮುನ್ನಡೆಸುತ್ತಾ ಬಂದಿದ್ದಾರೆ.
ನನ್ನದು ಕಬ್ಬಿನೊಂದಿಗಿನ ಏಳುಬೀಳು ಜೀವನ. ಈ ಉದ್ಯೋಗದಲ್ಲಿ ಲಾಭದ ಲೆಕ್ಕಾಚಾರ ಹಾಕುವುದು ತುಂಬಾ ಕಷ್ಟದ ಕೆಲಸ. ಬೇಸಿಗೆಯಲ್ಲಿ ಅಧಿಕ ಲಾಭವಾದರೆ, ಮಳೆಗಾಲದಲ್ಲಿ ಇರುವೆಯೂ ಈ ಕಡೆ ನುಸುಳುವುದಿಲ್ಲ. ಆಗ ಅಧಿಕ ನಷ್ಟ. ಕೇವಲ ಚಳಿಗಾಲದ ಮಧ್ಯ ತಿಂಗಳು ಮತ್ತು ಬೇಸಿಗೆ ಕಾಲದಲ್ಲಿ ಮಾತ್ರ ಕಬ್ಬಿನ ಪಾನಿಯಾಕ್ಕೆ ಅಧಿಕ ಬೇಡಿಕೆ. ಈ ಸಮಯದಲ್ಲಿ ದೊರೆತ ಲಾಭದಿಂದ ನಮ್ಮ ಜೀವನ ಎನ್ನುತ್ತಾರೆ ಮೀರಾ ಶೆಣೈ.
ಕಬ್ಬಿಗೆ ಬೇಸಿಗೆ ಕಾಲದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇಪ್ಪತ್ತು ಕಬ್ಬುಗಳನ್ನು ಜೋಡಿಸಿದ ಒಂದು ಕಟ್ಟು ಕಬ್ಬಿಗೆ 150 ರೂ ಇರುತ್ತದೆ. ಅದರಿಂದ 30 ಗ್ಲಾಸ್ ಕಬ್ಬಿನ ರಸ ತಯಾರಿಸಬಹುದು. ಒಂದು ಗ್ಲಾಸ್ ಜ್ಯೂಸ್ಗೆ 10ರೂ ಗಳಂತೆ 300ರೂ ಡುಡಿಮೆಯನ್ನು ಒಂದು ಕಟ್ಟಿನಿಂದ ಪಡೆಯಬಹುದು. 150 ರೂಗಳ ಲಾಭ ಒಂದು ಕಟ್ಟಿನಲ್ಲಿ ದೊರೆತರೂ ಕಬ್ಬಿನ ಸಿಪ್ಪೆ ತೆಗೆಯಲು ಕೆಲಸದವರಿಗೆ ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರದ ನಿರ್ವಾಹಣೆ, ಸಾರಿಗೆ ಹೀಗೆ ಎಲ್ಲಾ ಖರ್ಚುಗಳನ್ನು ಹೊರತು ಪಡಿಸಿದರೆ 50 ರೂ ಲಾಭ ಪಡೆಯಬಹುದು ಎಂದು ಅವರು ತಿಳಿಸುತ್ತಾರೆ.
'ಹಿಂದೆ ಚಕ್ರ ತಿರುಗಿಸಿ ಕಬ್ಬನ್ನು ಹಿಂಡಿ ಜ್ಯೂಸ್ ತಯಾರಿಸಬೇಕಿತ್ತು ಈಗ ತಂತ್ರಜ್ಞಾನ ಮುಂದುವರಿದಿದ್ದರಿಂದ ಸ್ವಯಂಚಾಲಿತ ಯಂತ್ರ ಬಳಕೆ ಮಾಡುತ್ತಿದ್ದೇವೆ ಹಾಗಾಗಿ ಕೆಲಸದ ಒತ್ತಡ ಸ್ವಲ್ಪ ಕಡಿಮೆ. ಆದರೆ ಕಬ್ಬಿನ ಸಿಪ್ಪೆ ತೆಗೆಯಲು, ಅದನ್ನು ಪೆರೆಸಲು ಕೆಲಸಗಾರರ ಕೊರತೆ ಎದುರಾಗುತ್ತಿದೆ'. ಎನ್ನುತ್ತಾರೆ ಮೀರಾ ಶೆಣೈ 
ಉಜಿರೆ ಧರ್ಮಸ್ಥಳ ಒಂದು ಪ್ರೇಕ್ಷಣೀಯ ಸ್ಥಳ. ಯಾತ್ರಾರ್ಥಿಗಳು ಹೆಚ್ಚಾಗಿ ಈ ಪರಿಸಿರದಲ್ಲಿ ಹಾದುಹೋಗುವುದರಿಂದ ಬಸ್ ಸ್ಟ್ಯಾಂಡ್ ಸಮೀಪವಿರುವ ನಮ್ಮ ಜ್ಯೂಸ್ ಸೆಂಟರ್ಗೆ ಬೇಸಿಗೆಯ ಬೇಗೆಯ ತೃಷೆ ತಣಿಸಲು  ಬರುತ್ತಾರೆ. ಹಾಗಾಗಿ 50 ವರ್ಷಗಳಿಂದ ಅಂಗಡಿಯನ್ನಿಟ್ಟು ಜೀವನ ಸಾಗಿಸಲು ಸಾಧ್ಯವಾಯಿತು. ನಮಗೆ ಖಾಯಂ ಗ್ರಾಹಕರು ಎಂದು ಯಾರೂ ಇರುವುದಿಲ್ಲ. ಹಾಗಾಗಿ ಇಷ್ಟೇ ವ್ಯಾಪಾರವಾಗುತ್ತದೆ ಎಂದು ಕರಾರುವಕ್ಕಾಗಿ ಲೆಕ್ಕಾಚಾರ ಹಾಕುವುದು ಅಸಾಧ್ಯ. ಬೇಸಿಗೆಯಲ್ಲಿ ದಿನ ಖರ್ಚುಗಾಗುವಷ್ಟು ವ್ಯಾಪಾರವಾಗಿ ಮಿಕ್ಕಿ ಲಾಭವಾಗುತ್ತದೆ. ಎನ್ನುತ್ತಾರೆ ಮೀರಾ ಶೆಣೈ.
ತಾನು ಅಬಲೆಯಲ್ಲ ಸಬಲೆ ಎಂದು ಸ್ವಾವಲಂಬಿಯಾಗಿ ತನ್ನ ಕಬ್ಬಿನ ಸೆಂಟರ್ನಿಂದ ಸಾಬೀತು ಪಡಿಸಿ ತನ್ನ ಜೊತೆ ತನ್ನ ಮಕ್ಕಳಿಗೂ ಸುಂದರ ಭವಿಷ್ಯ ರೂಪಿಸಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಿದ್ದಾರೆ. ಮೀರ ಅವರ ಸ್ವಾವಲಂಬಿ ಬದುಕು ಎಲ್ಲರಿಗೂ ಮಾದರಿ.
  • ಚಂದ್ರಶೇಖರ್ ಎಸ್ ಅಂತರ

Tuesday 20 November 2012

ಮಡಂತ್ಯಾರು ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ


ಬೆಳ್ತಂಗಡಿ: ಬಿ.ಸಿ ರೋಡ್ ಚಾರ್ಮಾಡಿ-234  ರಾಷ್ಟ್ರೀಯ ಹೆದ್ದಾರಿಲ್ಲಿ ಬರುವ ಮಡಂತ್ಯಾರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಕಾರ್ಯ ಆರಂಭವಾಗಿದೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದರಿಂದ ಸಾರ್ವಜನಿಕರು, ನಾಗರೀಕ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಅನೇಕ ಸಲ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದ್ದ ಪರಿಣಾಮವಾಗಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ.
ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ ಎಂದು ಕಳೆದ ವರ್ಷ ನಡೆದ ಪ್ರತಿಭಟನೆಯ ವೇಳೆ ಭರವಸೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು ವಿಭಾಗ ನುಡಿದಂತೆ ಕಾಮಗಾರಿ ಪ್ರಾರಂಭಿಸಿದೆ.
ಬಿ.ಸಿ ರೋಡ್ ಚಾರ್ಮಾಡಿ ರಸ್ತೆ ಕಾಮಗಾರಿ ನಡೆಸುವ ಯೋಜನೆಯಡಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಜನ ಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣ ಹದಗೆಟ್ಟಿದ್ದ ಕೋಲ್ಪೆದಬೈಲು-ಪುಂಜಾಲಕಟ್ಟೆ ರಸ್ತೆಯನ್ನು ಅಗೆದು ಮರು ಡಾಮರೀಕರಣಗೊಳಿಸುವ ಯೋಜನೆ ರೂಪಿಸಲಾಗಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿದೆ.
ರಸ್ತೆಯ ದರಾವಸ್ಥೆಯ ಪರಿಣಾಮವಾಗಿ ಕೆಲ ದಿನಗಳ ಹಿಂದೆ ಚಲಿಸುವ ಬಸ್ಸಿನ ಚಕ್ರಕ್ಕೆ ಜೆಲ್ಲಿ ಕಲ್ಲು ಸಿಲುಕಿ ಹಾರಿ ಮಡಂತ್ಯಾರಿನ ಬಾಳಿಗ ಸ್ಟೋರ್  ಅಂಗಡಿಯ ಶೋಕೇಸ್ಗೆ ತಗಲಿ ಗಾಜು ಚೂರಾದ ಘಟನೆ ಸಂಭವಿಸಿದೆ. ಪಾದಾಚಾರಿಗಳಿಗೂ ಕಲ್ಲಿನ ಏಟುಗಳು ಬೀಳುವ ಸಂಭವವಿದ್ದು ಅತೀ ಶೀಘ್ರದಲ್ಲಿ ದುರಸ್ತಿ ನಡೆಯಬೇಕಿದೆ ಎಂದು ಜನರು ಒತ್ತಾಯಿಸಿದ್ದಾರೆ. ಫೆಬ್ರವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗ ಡಶಂಬರ್-ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದೆ.
  ಮಡಂತ್ಯಾರಿನಲ್ಲಿ ಸದ್ಯಕ್ಕೆ ರಸ್ತೆ ಅಗೆಯಲಾಗುತ್ತಿದ್ದು ಸಂಪೂರ್ಣ ಮಡಂತ್ಯಾರು ಪೇಟೆ ದೂಳು ಮಯವಾಗಿದೆಯಾದರೂ ಜನರಲ್ಲಿ ರಸ್ತೆ ದುರಸ್ತಿಯಗುತ್ತಿರುವ ಸಂತಸವಿದೆ. ಬಿ.ಸಿ ರೋಡ್ ಚಾಮರ್ಾಡಿ ರಸ್ತೆಯಲ್ಲಿ ಸಂಪೂರ್ಣ ಹಡಗೆಟ್ಟ ರಸ್ತೆಗಳಿಗೆ ಮರು ಡಾಮರೀಕರಣ, ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿ ಬಿದ್ದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ. ರಾಜ್ಕಮಲ್ ಕನ್ಸ್ಟ್ರಾಕ್ಷನ್ಸಸ್ ಮಂಗಳೂರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.
  • ಚಂದ್ರಶೇಖರ್ ಎಸ್  ಅಂತರ

Tuesday 13 November 2012

ನಾಡಿಗೆ ಸಮೃದ್ಧಿ ತರಲಿ ದೀಪಾವಳಿ


ದೀಪಾವಳಿ ದೇಶದೆಲ್ಲೆಡೆ ಆಚರಿಸಲಾಗುತ್ತಿರುವ ವಿಶೇಷವಾದ ಹಬ್ಬ. ಜಾತಿ, ಮತಗಳ ಬೇಧವಿಲ್ಲದೆ ಒಂದಾಗಿ ಸುಜ್ಞಾನದ ದೀಪ ಹಚ್ಚಿ ಅಂಧಕಾರ ಹೊಗಲಾಡಿಸುವ ಹಬ್ಬ. ದೀಪದಿಂದ ದೀಪವ ಹಚ್ಚಿ, ಪ್ರೀತಿಯಿಂದ ಪ್ರೀತಿಯನ್ನುಗಳಿಸುವ ಪವಿತ್ರ ಸಂಕೇತವೇ ದೀಪಾವಳಿ. ಎಲ್ಲೆಲ್ಲೂ ದೀಪದ ಆವಳಿ ಸೃಷ್ಠಸಿ ಜಗತ್ತೇ ಸುಜ್ಞಾನದ ದೀವಿಗೆ ಕಡೆ ಕೊಂಡೊಯ್ಯುವ ಹಬ್ಬ ದೀಪಾವಳಿ. ಪ್ರೇಮ, ಪ್ರೀತಿಯೆಂಬ ಶುದ್ಧ ಎಣ್ಣೆಯಿಂದ ಹತ್ತಿಸಿದ ಭಕ್ತಿಯೆಂಬ ಜ್ಯೋತಿಯನ್ನು ಪಸರಿಸಿ ಜಗತ್ತಿನೆಲ್ಲಡೆ ಶಾಂತಿ ಸೌಹಾರ್ದತೆಯ ಬೀಜ ಮಂತ್ರವನ್ನು ಮೊಳಗಿಸುವ ಸುಸಂದರ್ಭ.
ದೀಪಾವಳಿ ಒಂದು ಧಾರ್ಮಿಕ  ಹಬ್ಬವೂ ಹೌದು. ಪುರಾಣ ಇತಿಹಾಸ ಮೂಲಕ ದೀಪಕ್ಕೂ ಭಾರತೀಯರಿಗೂ ನಂಟಿದೆ. ಯಾವೂದೇ ಶುಭ ಸಂದರ್ಭದಲ್ಲಿ ಸಮಾರಂಭದಲ್ಲಿ ದೀಪ ಬೆಳಗಿಸುವ ಪದ್ಧತಿ ಭಾರತದಲ್ಲಿದೆ. ಹಾಗಾಗಿ ಭಾರತೀಯರ ಬದುಕಿನಲ್ಲಿ ದೀಪವೇ ಎಲ್ಲ ಆಗಿದೆ. ಮುಂಜಾನೆ ಎದ್ದು ಜಲಕ ಮಾಡಿ ದೇವರಿಗೆ ದೀಪ ಬೆಳಗಿಸಿ ಕಾರ್ಯ ಪ್ರವೃತ್ತರಾಗುತ್ತೇವೆ. ಹಾಗಾಗಿ ದೀಪಕ್ಕೂ ಆಧ್ಯಾತ್ಮ ಲೋಕಕ್ಕೂ ಒಂದು ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರ ಪ್ರಾರಂಭಗೊಳ್ಳುವುದು ಸೂರ್ಯನಿಂದ. ಸೂರ್ಯ ಜಗತ್ತಿಗೇ ಬೆಳಕು ನೀಡುವ ಶಕ್ತಿ. ಹೀಗೆ ಎಲ್ಲದಕ್ಕೂ ಮೂಲ ಬೆಳಕು. ಬೆಳಕಿಲ್ಲದ ಜೀವನ ಬೇರಿಲ್ಲದ ಮರದಂತೆ. ದೀಪದ ರೂಪದಲ್ಲಿ ಪರಮಾತ್ಮನನ್ನು ಆದಿ ಮಾಯೆ ದುರ್ಗೆಯನ್ನು ಕಾಣುವ ಪ್ರತೀತಿ ಇದೆ. ಹಾಗಾಗಿ ಭಾರತದಲ್ಲಿ ದೀಪಕ್ಕೆ ಜ್ಯೋತಿಗೆ ಹೆಚ್ಚು ಮೌಲ್ಯ. ದೀಪಾವಳ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯ.
ಬಲಿವೇಂದ್ರ ಚಕ್ರವರ್ತಿ ತನ್ನ ಊರನ್ನು ವೀಕ್ಷಿಸಲು ಬರುವ ಸಮಯ ದೀಪಾವಳಿ ಎಂದು ಪುರಾಣ ಹೇಳುತ್ತದೆ. ಜನರ ಸುಭೀಕ್ಷೆ ಜೀವನ ಶೈಲಿ, ತನ್ನ ನೆಲ ಜಲವನ್ನು ನೋಡುವ ಸಲುವಾಗಿ ಬಲಿ ಚಕ್ರವರ್ತಿ  ಬರುವ ಹೊತ್ತು ಎಂದು ಹೇಳಲಾಗಿದೆ. ನರಕ ಚತುರ್ದಶಿ ನರಕಾಸುರನ್ನು ವಧೆ ಮಾಡಿದ ಕೃಷ್ಣನ ಕಥೆ ಪೌರಾಣಿಕ ಪುಸ್ತಕಗಳಲ್ಲಿದೆ. ಹಿಗೆ ಅನೇಕ ವಿಚಾರಗಳನ್ನು ಹೊತ್ತು ತರುತ್ತದೆ ದೀಪಾವಳಿ. ಅಂಧಕಾರ, ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟಾಚಾರದ ಬೆಳಕನ್ನು ನೀಡುವ ಹಬ್ಬವಾಗಿದೆ ದೀಪಾವಳಿ.
ದೀಪದ ಬದುಕು ಮತ್ತು ಶಕ್ತಿ ಎಣ್ಣೆ ಮತ್ತು ಬತ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅದು ತನ್ನ ಜೀವಿತಾವಧಿಯಲ್ಲಿ ಇತರರಿಗೆ ಬೆಳಕಿನ ದಾರಿ ತೋರಿಸುತ್ತದೆ. ಅಂತೆಯೇ ಮನುಷ್ಯರೂ ಕೂಡ ಪರರ ಕಷ್ಟಕ್ಕೆ ಸ್ಪಂದಿಸಬೇಕು. ಅವರ ಜೀವನದಲ್ಲಿ ಬೆಳಕನ್ನು ನೀಡಲು ಪ್ರಯತ್ನಿಸಬೇಕು ಎಂಬುದು ಇದರ ಗೂಡಾರ್ಥ.
ದಿಪಾವಳಿ ಸಮೃದ್ಧಿಯ ಸಂಕೇತ. ಬೆಳಕು ನಿರಾಕಾರವದುದು ಆತ್ಮವೂ ನಿರಾಕಾರವಾದುದು. ಹಿಗೆ ಶ್ರೇಷ್ಠವಾದ ಶಕ್ತಿಗಳಲ್ಲಾ ಕಾಲಾತೀತವಾದುದು ಅದೆಲ್ಲಾ ಅಲೌಕಿಕವಾದುದು. ಅರಿಷಡ್ವರ್ಗಗಳನ್ನು ಮೀರಿ ನಿಂತು ಬೆಳೆದ ಪವಿತ್ರ ಶಕ್ತಿಗಳು. ದೀಪವೂ ಅಷ್ಟೇ ಪವಿತ್ರವಾದ ಒಂದು ಶಕ್ತಿಯಾಗಿದೆ. ಹೀಗೆ ದೀಪದ ಶ್ರೇಷ್ಠತೆಯ ಕುರಿತು ಅನೇಕ ವರ್ಣನೆಗಳಿವೆ.
ದೀಪಾವಳಿಯ ಸಮಯ ಕೃಷಿ ಫಸಲು ಕೊಡುವ, ಭತ್ತ ಕಟಾವಿಗೆ ಸಿದ್ಧವಾದ ಸಮಯ. ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಿ ಹಣಗಳಿಸುವ ಯೋಗ್ಯ ಸಮಯ. ಈ ಸಂಧರ್ಭದಲ್ಲಿ ಕೃಷ್ಯುತ್ಪನ್ನಗಳನ್ನುಗಳಿಗೂ ಅಧಿಕ ಬೇಡಿಕೆ ಇರುತ್ತದೆ. ರೈತರಿಗೂ ವ್ಯಾಪಾರಿಗಳಿಗೂ ಸಂಭ್ರಮದ ಕಾಲ. ಎಲ್ಲರ ಮನೆಯಲ್ಲೂ ಲಕ್ಷ್ಮೀ ಕಳೆ ತುಂಬಿ ಸಂಪತ್ಭರಿತವಾಗಿ ಜನರ ಮೊಗದಲ್ಲಿ ಸಂತಸ ನಗೆ ಬೀರುವ ಹೊತ್ತು. ಇವೆಲ್ಲದರ ಪ್ರತಿಬಿಂಬವೇ ದೀಪಾವಳಿ. ಹಣತೆಯನ್ನು ಹಚ್ಚಿ ದೀಪಬೆಳಗಿಸಿ ಕಷ್ಟಗಳೆಲ್ಲಾ ಪರಿಹಾರವಾಯಿತು ಎಂದು ನಾಡ ಜನರು ಸಂಭ್ರಮಿಸುವ ಕಾಲ ಇದು. ಹೀಗೆ ದೀಪಾವಳಿಯನ್ನು ಅನೇಕ ರೀತ ವ್ಯಾಖ್ಯಾನಿಸಬಹುದು.
ನಾಡಿನಲ್ಲಿ ಸುಜ್ಞಾನವಚನ್ನು ಪಸರಿಸುವ ಕಾರ್ಯ ನಮ್ಮಿಂದಾಗಬೆಕಿದೆ. ದೀಪದ ಸಂದೇಶವನ್ನು ತಿಳಿ ಹೇಳುವ ಕೆಲಸವಾಗಬೆಕಿದೆ. ಭ್ರಷ್ಟಾಚಾರ, ಭಯೋತ್ಪಾದನೆ, ಹೀಗೆ ಅನೆಕ ದುಷ್ಟ ಶಕ್ತಿಗಳ ಬೀಡಾಗುತ್ತಿರುವ ನಮ್ಮ ದೇಶವನ್ನು ಸುಜ್ಞಾನದ ದೀಪದ ಬೆಳಕಿನಲ್ಲಿ ಮನ್ನಡೆಸಬೆಕಿದೆ. ಹೆಚ್ಚಾಗುತ್ತಿರುವ ಅಂಧಕಾರವನ್ನು ಹೋಗಲಾಡಿಸಬೆಕಿದೆ. ಈ ದೀಪಾವಳಿ ಸಮಾಜದ ಸಾಸ್ಥ್ಯ ಕಾಪಾಡಿ ಎಲ್ಲರ ಬದುಕಲ್ಲೂ ಸುಜ್ಞಾನದ ದೀಪ ಬೆಳಗಿಸಲಿ. ದೇಶವನ್ನು ಸಮೃದ್ಧಿಗೊಳಸಲಿ ಎಂದು ನಮ್ಮ ಆಶಯವಾಗಿದೆ.
  • ಚಂದ್ರಶೇಖರ್ ಎಸ್ ಅಂತರ

Monday 12 November 2012

ಹೀಗೊಬ್ಬ ಅಪರೂಪದ ಪರಿಸರ ಪ್ರೇಮಿ


 ಶುಚಿತ್ವ ಕಾಪಾಡಿ ಪರಿಸರವನ್ನು ಚೊಕ್ಕವಾಗಿಟ್ಟುಕೊಳ್ಳಿ ಎನ್ನುವ ಉಪದೇಶ ಭಾಷಣ, ಸಮಾವೇಶ, ಆಂದೋಲನಗಳಲ್ಲಿ ಯಥೇಚ್ಛವಾಗಿ ಕೇಳ ಸಿಗುತ್ತದೆ. ಸ್ವಚ್ಛತೆ ಕುರಿತಾಗಿ ಒಂದೆರಡು ದಿನ ಸಮಾವೇಶ, ಜಾಥಗಳನ್ನ ಕೈಗೊಂಡು ಮಾದ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡು ಎಂದು ಬಳಿಕ ಸುಮ್ಮನಾಗುವವರು ಪ್ರತಙೀ ಊರಿನಲ್ಲೂ ಸಿಗುತ್ತಾರೆ.ಇಂತಹ ಪರಿಸರ ಪ್ರೇಮಿಗಳ ಪರಿಸರ ಕಾಳಜಿ ಏನಿದ್ದರೂ ಜುಲೈ ತಿಂಗಳ ವನಮಹೋತ್ಸವ ಅಕ್ಟೋಬರರ ತಿಂಗಳ ವನ್ಯ ಜೀವಿಗಳ ಸಪ್ತಾಹಗಳ ಅವಧಿಗೆ ಮಾತ್ರ ಸೀಮಿತ.
ಈ ನಡುವೆಯೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಮೈಗೂಡಿಸಿಕೊಂಡು ಅದನ್ನು ಕಾಯಾ ವಾಚಾ ಮನಸಾ ಪಾಲಿಸುವವರು ಅಲ್ಲೊಬ್ಬರು ಇಲ್ಲೊಬ್ಬರು ಕಾಣ ಸಿಗುತ್ತಾರೆ. ಮಚ್ಚಿನ ಗ್ರಾಮದ ದೇವರಾಜ್ ದೇವಾಡಿಗ ಇಂತಹ ಅಪರೂಪದ ವ್ಯಕ್ತಿಗಳಲ್ಲಬ್ಬರು. ಯಾವುದೇ ಸ್ವಾರ್ಥ ಇಲ್ಲದೆ ಪ್ರತಿ ದಿನೆ ಪರಿಸರ ಸ್ವಚ್ಛತೆಗಾಗಿ ಶ್ರಮಿಸುತ್ತಾ ಬಂದಿರುವ ದೇವರಾಜ್ ತಮ್ಮ ಊರು, ಕೇರಿ ಹಾಗೂ ಗ್ರಾಮದ ಸ್ವಚ್ಛತೆಗಾಗಿ ಸದಾ ಶ್ರಮ ದಾನ ಮಾಡುತ್ತಾ ಗಮನ ಸೆಳೆದಿದ್ದಾರೆ. ಪರಿಸರವನ್ನು ಸವಚ್ಛವಾಗಿಡಲು ತಮ್ಮಿಂದಾದ ಕೈಂಕರ್ಯಗಳನ್ನು ಅವರು ನರಂತರವಾಗಿ ಮಾಡುತ್ತಾ ಬಂದಿದ್ದಾರೆ.
ದೇವರಾಜ್ ದೇವಾಡಿಗರಿಗೆ ನಲವತ್ತಾರು ವರ್ಷ. ವೃತ್ತಿಯಲ್ಲಿ ಕೂಲಿ ಕಾಮರ್ಿಕ. ಪ್ರವೃತ್ತಿಯಲ್ಲಿ ಪ್ರಕೃತಿಯ ಆರಾಧಕ. ಅದರ ಅಂದಕ್ಕೆ ಚ್ಯುತಿ ಉಂಟುಮಾಡುವ ಕಸ ಕಡ್ಡಿ, ಬಾಟಲಿ, ಪ್ಲಾಸ್ಟಿಕ್, ತೆರೆಗೆಲೆ, ಕಳೆ, ಮುಳ್ಳುಗಳು ಇತ್ಯಾದಿ ಅನೇಕ ಸಣ್ಣ ಪುಟ್ಟ ತ್ಯಾಜ್ಯಗಳನ್ನು ಹೆಕ್ಕಿ ಪರಿಸರ ಶುಚಿಗೊಳಿಸುವ ಕಾಯಕವನ್ನು ಅವರು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವಾಗ, ಆರಂಭದಲ್ಲಿ ಜನ ಹೀಯಾಳಿಸುತ್ತಿದ್ದುದೂ ಉಂಟು. ಆದರೆ ಅದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ಸೇವೆಯನ್ನು ಮುಂದುವರಿಸುತ್ತಾ ಬಂದಿದ್ದಾರೆ. ಕ್ರಮೇಣ ಜನರೂ ಕೂಡ ಇವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ಇವರ ಸೇವೆ ಬಗ್ಗೆ ಹೆಮ್ಮೆ ಪಡುತ್ತಾರೆ.
ಕೇವಲ ಪ್ರಕೃತಿ ಶುಚಿತ್ವ ಮಾತ್ರವಲ್ಲದೆ ಮಳೆಗಾಲದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸುವುದು, ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸುವುದು, ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಪ್ರಾಣಿಗಳ ವಿಲೇವಾರಿ ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯ ಇವರು ಶ್ರದ್ಧೆಯಿಂದ ಮಾಡುತ್ತಿದ್ದಾರೆ.
'ಶುಚಿತ್ವದ ಕುರಿತಾದ ಚಿಂತನೆ ನನ್ನದು. ಗಾಂಧೀಜಿಯ ಅಹಿಂಸಾ ತತ್ವ ಪಾಲಾಕ ನಾನು. ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ನಂಬಿದವ. ಹಾಗಾಗಿ ನಿರ್ಮಲ ಗ್ರಾಮ ರೂಪಿಸುವಲ್ಲಿ ನನ್ನ ಕಿರು ಸೇವೆ. ಪ್ರತೀ ದಿನ ಗ್ರಾಮದ ಬಸ್ಸು ನಿಲ್ದಾಣ ಸ್ವಚ್ಛಗೊಳಿಸುತ್ತೇನೆ. ಪ್ರತಿ ಭಾನುವಾರ ಪೂರ್ತಿ  ಗ್ರಾಮವನ್ನು ತಿರುಗುತ್ತೇನೆ ಕಸಕಡ್ಡಿ, ತ್ಯಾಜ್ಯಗಳನ್ನು ಹೆಕ್ಕುತ್ತೇನೆ, ಸಾರ್ವಜನಿಕ ಶೌಚಾಲಯ ಶುಚಿಗೊಳಿಸುತ್ತೇನೆ. ಪ್ರತಿದಿನ ಮನೆಯಿಂದ ಕೆಲಸಕ್ಕೆ ಹೋಗುವಗ ನಡೆವ ದಾರಿಯಲ್ಲಿ ಕಸ ಕಡ್ಡಿ ಕಂಡರೆ ಆರಿಸಿ ಕಸದ ತೊಟ್ಟಿಗೆ ಹಾಕತ್ತೇನ ಎನ್ನುತ್ತಾರೆ ದೇವರಾಜ್.
ಪರಿಸರ, ಶೌಚಾಲಯ ನಿರ್ಮಲವಿಡಲು ಅವರು ತಮ್ಮ ಸ್ವಂತ ದುಡಿಮೆಯ ಸಂಪಾದನೆಯಲ್ಲಿ ವಾರಕ್ಕೆ ಕನಿಷ್ಟ 10ರೂ ವ್ಯಯಿಸುತ್ತಾರೆ. ಪ್ರತೀ ರವಿವಾರ ಅವರದು ಪರಿಸರಕ್ಕಾಗಿ ಶ್ರಮದಾನದ ದಿನ. ಅಪರಾಹ್ನದವರೆಗೆ ಗ್ರಾಮದೊಳಗೆ 6-7 ಕಿ.ಮೀ ತನಕ ಅವರ ನಡಿಗೆ. ಇವರ ಶುಚಿತ್ವದ ಕಾಳಜಿ ಕಂಡ ಮಚ್ಚಿನ ಗ್ರಾ.ಪಂ ಗಾಂಧಿ ಜಯಂತಿಯಂದು ಇವರಿಗೆ ಸನ್ಮಾನಿಸಿತು.
'ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಗೆ  ತಿಳಿಸುತ್ತಿದ್ದೇನೆ. ಜನರಲ್ಲೂ ಸ್ವಚ್ಛತೆಯ ಅರಿವು ಮೂಡಿಡೆ. ಕಸ ಕಡ್ಡಿ, ಪ್ಲಾಸ್ಟಕ್ ತ್ಯಾಜ್ಯಗಳನ್ನು ಅಲ್ಲಲ್ಲಿ ಎಸೆಯುವುದು ಕಡಿಮೆಯಾಗಿದೆ. ಇದು ನನಗೆ ಸಾರ್ಥಕತೆ ತಂದಿದೆ' ಎನ್ನುತ್ತಾರೆ ದೇವರಾಜ್.
ಪ್ರಚಾರ ಗಿಟ್ಟಿಸುವ ಸಲುವಾಗಿ ತೋರಿಕೆಗಾಗಿ ಸಾಕಷ್ಟು ಹಣ ಪೋಲು ಮಾಡಿ ಸ್ವಚ್ಛತಾ ಜಾಗೃತಿ ಆಂದೋಲನದಲ್ಲಿ ಭಾಷಣಗಳನ್ನು ಬೀಗುವ ಜನರಿಗೆ, ಇವರ ನಿಸ್ವಾರ್ಥ ಸೇವೆ ಒಂದು ಪಾಠವಾಗಬೇಕು. ಪಕ್ಷಾತೀತವಾಗಿ ಪ್ರಚಾರ ಗಿಟ್ಟಿಸದೆ ಪರಿಸರ ಸ್ವಚ್ಛಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಇತರರಿಗೆ ಪ್ರೇರಣೆಯಾದರೆ ದಕ್ಷಿಣ ಕನ್ನಡ ಜಿಲ್ಲೆ ನಿಜವಾದ ಅರ್ಥದಲ್ಲಿ 'ಸಂಪೂರ್ಣ ಸ್ವಚ್ಛತಾ ಜಿಲ್ಲೆ' ಆಗುವುದರಲ್ಲಿ ಅನುಮಾನವಿಲ್ಲ. ದೇವರಾಜರ ಸ್ವಚ್ಛತಾ ಅಭಿಯಾನಕ್ಕೆ ನಾವೆಲ್ಲರೂ ಬಿಗುಮಾನ ಮರೆತು ಕೈ ಜೋಡಿಸೋಣವಲ್ಲವೇ.
  • ಚಂದ್ರಶೇಖರ ಎಸ್ ಅಂತರ.  

Thursday 8 November 2012

ಕತ್ತರಿ ಸಾಣೆಗರರ ಬದುಕು ಅಡಕತ್ತರಿಯಲ್ಲಿ

ಕೆಲ ವರ್ಷಗಳ ಹಿಂದೆ ಸ್ವ ಉದ್ಯೋಗ ನಡೆಸುವವರಿಗೆ ಕತ್ತರಿ ಸಾಣೆಯೂ ಒಂದು ಆಯ್ಕೆ. ಕತ್ತರಿ ಸಾಣೆ ಕಾಯಕ ಮೂಲಕ ಜೀವನ ಸಾಗಿಸುತ್ತಿದ್ದರು ಅದೆಷ್ಟೋ ಮಂದಿ. ಆದರೆ ಈಗ ಆ ಉದ್ಯೋಗ ಕ್ಷೀಣಿಸುತ್ತಿದ್ದು ಅಲ್ಲಲ್ಲಿ ಕೆಲ ಮಂದಿ ಇನ್ನೂ ಇದನ್ನೇ ನೆಚ್ಚಿ ಕೊಂಡಿದ್ದಾರೆ. ಆದರೆ ಅವರ ಜೀವನಕ್ಕೇ ಕತ್ತರಿ ಸಾಣೆ ಕಾಯಕ ಈಗ ಸಂಚಕಾರವಾಗಿದೆ.
ಈಗಿನ ಜನರದು ವೇಗದ ಬದುಕು. ಏನಿದ್ದರೂ ಬಳಸಿ ಬಿಸಾಡುವ ವಿಚಾರ ಧಾರೆ. ಪುನರ್ಬಳಕೆಯ ಕುರಿತಾದ ಯೋಚನೆ ಜನರ ಮನದಲ್ಲಿಲ್ಲ. ಹಾಗಾಗಿ ಕತ್ತರಿ ಸಾಣೆ ಮಾಡುವ ಗೋಜಿಗೆ ಯಾರೊಬ್ಬರೂ ಹೋಗುವುದಿಲ್ಲ. ಹರಿತ ಕಳೆದುಕೊಂಡ ಕತ್ತರಿ ಬಿಸಾಡಿ ಹೊಸದನ್ನು ಖರೀದಿಸುತ್ತಾರೆ. ಹೆಚ್ಚಿನ ಎಲ್ಲಾ ವಸ್ತುಗಳಿಗೂ ಇದೇ ಪರಿಪಾಠ.
ಕತ್ತರಿ ಸಾಣೆಗರರು  ಸಿಗುವುದೇ ಅಪರೂಪ. ಮರುಭೂಮಿಯಲ್ಲಿ ನೀರು ಸಿಕ್ಕಂತೆ. ಸಿಕ್ಕರೆ ಅವರಲ್ಲಿ ಮಾತನಾಡಿಸಿದರೆ, ಅವರ ಜೀವನದ ಬವಣೆ ಕುರಿತು ಕೇಳಿದರೆ ಎಂಥಾ ಕಲ್ಲು ಹೃದಯಿಯೂ ಭಾವುಕನಾಗಬಹುದು. ಅವರ ತುತ್ತಿನ ಚೀಲಕ್ಕೆ ಕತ್ತರಿಯಾಗಿ ಮಾರವಕವಾಗಿದೆ ಅವರ ಕಾಯಕ.
ನನಗೆ ವಿದ್ಯೆ ಹತ್ತಲಿಲ್ಲ, ಬೇರೆ ಉದ್ಯೋಗ ಅಷ್ಟೊಂದು ಗೊತ್ತಲ್ಲ. ಕತ್ತರಿ ಸಾಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದೆನೆ. ಕೆಲ ವರ್ಷಗಳ ಹಿಂದೆ ಕತ್ತರಿ ಸಾಣೆ ಮಾಡಿಸುವವರ ಸಂಖ್ಯೆ ಹೆಚ್ಚಿತ್ತು. ನನಗೂ ಈ ಕಾಯಕದಲ್ಲಿ ಉತ್ತಮ ಲಾಭ ದೊರೆಯುತ್ತಿತ್ತು. ಆದರೀಗ ಕಡಿಮೆ ದರದಲ್ಲಿ ಕತ್ತರಿ ಸಾಣೆ ಮಾಡುತ್ತೇವೆ ಎಂದರೂ ಯಾರೂ ನಮ್ಮತ್ತ ಸುಳಿಯುತ್ತಿಲ್ಲ. ಕೆಲ ಸೆಲೂನ್ನವರು, ಗೂಡಂಗಡಿಯವರು ಕತ್ತರಿ ಸಾಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆ ದಿನದ ಗಳಿಕೆ ಆದಿನಕ್ಕೆ ಮಾತ್ರ. ಉಳಿಕೆ ಮಾಡಲು ಅಸಾಧ್ಯವಾಗಿದೆ. ದಿನದ ಖರ್ಚನ್ನು ಗಳಿಸಲು ಸಾಧ್ಯವಾಗದ ದಿನಗಳಿವೆ ಎಂದು ಕತ್ತರಿ ಸಾಣೆ ಕಾಯಕದಲ್ಲಿ ತೊಡಗಿಕೊಂಡಿರುವ ಹೆಸರು ಹೇಳಲಿಚ್ಛಿಸದ ಒರ್ವ ತಿಳಿಸುತ್ತಾರೆ.
ಕತ್ತರಿ ಸಾಣೆ ಕಾರ್ಯ ಸುಲಭದ ಮಾತಲ್ಲ. ಕಾಲಿನಿಂದ ಯಂತ್ರದ ಮೆಟ್ಟನ್ನು ತುಳಿದು ಚಕ್ರವನ್ನು ತಿರುಗಿಸಬೇಕು. ಹೆಚ್ಚಿನ ಶ್ರಮ ಅಗತ್ಯ. ಕಾಲಿನಿಂದ ತುಳಿದು ಚಕ್ರ ತಿರುಗಿಸುವುದರಿಂದ ಕಾಲಿನ ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಮಾರಕವಾಗಿ ತಡೆಯಲಸಾಧ್ಯ ನೋವು ಉಂಟಾಗಿ ಉದ್ಯೋಗವನ್ನು ಮೊಟಕುಗೊಳಿಸ ಬೇಕಾಗಿ ಬಂದ ನಿದರ್ಶನಗಳಿವೆ. ಕೆಲಸ ಎಷ್ಟೇ ಕಷ್ಟವಾದರೂ ಸಂಸಾರ ನಿಭಾಯಿಸಲು, ಮಕ್ಕಳ ಭವಿಷ್ಯಕ್ಕಾಗಿ ಈ ಕಾಯಕವನ್ನು ಮುಂದುವರಿಸುತ್ತಿದ್ದೇನೆ. ಎನ್ನುತ್ತಾರೆ ಅವರು.
ಸ್ವ ಉದ್ಯೋಗಿಗಳ ಜೀವನದ ಅಂಗದಂತಿದ್ದ ಕತ್ತರಿ ಸಾಣೆಯ ಯಂತ್ರ ನನೆಗುದಿಗೆ ಬಿದ್ದಿದೆ. ಹೊಟ್ಟೆಗೆ ಹಿಟ್ಟು ನೀಡುತ್ತಿದ್ದ ಕತ್ತರಿ ಸಾಣೆ ಕಾಯಕ ಹೊಟ್ಟೆಯನ್ನು ಬರಿದಾಗಿಸುತ್ತಿದೆ. ಇವೆಲ್ಲದರ ನಡುವೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಅದೇ ಕಾಯಕದಲ್ಲಿ ತೊಡಗಿರುವ ಜೀವಗಳ ಬದುಕು ದುಸ್ತರವಾಗದಿರಲಿ ಎನ್ನುವುದು ನಮ್ಮ ಆಶಯ.
  • ಚಂದ್ರಶೇಖರ ಎಸ್ ಅಂತರ


Monday 5 November 2012

ಕ್ರೀಡೆ ಒಗ್ಗಟ್ಟಿನ ಪ್ರತೀಕ : ಫಾ| ಜೋಸೆಫ್ ಡಿ'ಸೋಜ


ಬೆಳ್ತಂಗಡಿ: ಕ್ರೀಡೆ ಒಗ್ಗಟ್ಟಿನ ಪ್ರತೀಕ. ಸಾಮರಸ್ಯದ ಬಾಂಧವ್ಯ ಮೂಡಿಸಲು ಕ್ರೀಡೆ ಸಹಕಾರಿ. ಧಮಾðಧತೆಯನ್ನು ಅಳಿಸುವ ನಿಟ್ಟಿನಲ್ಲಿ ಕ್ರೀಡೆಯ ಪಾತ್ರ ಅನನ್ಯ ಎಂದು ಬೆಂಗಳೂರಿನ ಸಂತ ದೋಮಿನಿಕ್ ಚರ್ಚ್ ನ ಧರ್ಮಗುರುಗಳಾದ ಫಾ| ಜೋಸೆಫ್ ಡಿ'ಸೋಜ ತಿಳಿಸಿದರು.
ಅವರು ಮಡಂತ್ಯಾರಿನಲ್ಲಿ ಫ್ರೆಂಡ್ಸ್ ಮಡಂತ್ಯಾರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 5ನೇ ವರ್ಷದ ಅಂಗವಾಗಿ ನಡೆಯುತ್ತಿರುವ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ರೀಡೆ ಜನರಲ್ಲಿರುವ  ಧಮಾðಧತೆಯನ್ನು ತೆಯ ಹೊದಿಕೆಯನ್ನು ಕಳಚಿ ಒಗ್ಗಟ್ಟಿನ ಮಂತ್ರ ಜಪಿಸಲು ಸಹಕಾರಿ. ಕ್ರೀಡೆಯಿಂದ ದೈಹಿಕ ಸದೃಢತೆ ಜೊತೆಗೆ ಮಾನಸಿಕ ಸಮತೋಲನ ಕಾಪಾಡಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ಉಪಾಧ್ಯಕ್ಷ, ದ.ಕ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ನ ಕಾರ್ಯದಶಿð  ಪುರುಷೋತ್ತವು ಪುಜಾರಿ, ನಾಳ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಮಜಲು, ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಫ್ರೆಂಡ್ಸ್ ಮಡಂತ್ಯಾರು ಸಂಘದ ಅಧ್ಯಕ್ಷ ಕೆ.ಜಿ ಸುಬ್ರಹ್ಮಣ್ಯ, ಉದ್ಯಮಿ ಭೋಜ ಎಮ್ ಶೆಟ್ಟಿ, ಸಂಜೀವ ಶೆಟ್ಟಿ ಮಗರೋಡಿ, ಕಿನ್ನಿಗೋಳಿಯ ಸಿವಿಲ್ ಕಂಟಾಕ್ಟರ್ ಜೋಕಿಂ ಸೇರಾ, ಬಸವನಗುಡಿಯ ಗಣೇಶ್ ವುಡ್ ಇಂಡಸ್ಟ್ರೀಸ್ನ ಮಾಲಕ ಪದ್ಮ ಮೂಲ್ಯ ಅನಿಲಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಉದ್ಘಾಟನಾ ಸಮಾರಂಭದ ಅಂಗವಾಗಿ ಏರ್ಪಡಿಸಲಾದ ಮೆರವಣಿಗೆಯನ್ನು ಕಿನ್ನಿಗೋಳಿಯ ಸಿವಿಲ್ ಕಂಟಾಕ್ಟರ್ ಜೋಕಿಂ ಸೇರಾ ಉದ್ಘಾಟಿಸಿದರು.
ಕ್ರೀಡಾಂಗಣವನ್ನು ಬಸವನಗುಡಿಯ ಗಣೇಶ್ ವುಡ್ ಇಂಡಸ್ಟ್ರೀಸ್ನ ಮಾಲಕ ಪದ್ಮ ಮೂಲ್ಯ ಅನಿಲಡೆ ಉದ್ಘಾಟಿಸಿದರು.
ಕೆ.ಜಿ ಸುಬ್ರಹ್ಮಣ್ಯ ಸ್ವಾಗತಿಸಿದರು, ದ.ಕ ಜಿಲ್ಲೆಯ ಕಬಡ್ಡಿ ತೀಪುðಗಾರರ ಸಂಚಾಲಕ ಫ್ರಾನ್ಸಿಸ್ ವಿವಿ ವಂದಿಸಿದರು. ರಾಜೀವ ಶೆಟ್ಟಿ ನಿರೂಪಿಸಿದರು.
  • ಚಂದ್ರಶೇಖರ್ ಎಸ್ ಅಂತರ

Sunday 4 November 2012

ಜೈನ ಸಂಸ್ಕೃತಿಯ ಅರಿವು ಅಗತ್ಯ- ಡಾ. ಡಿ. ಹೆಗ್ಗಡೆ


ಜೈನ ಸಂಸ್ಕೃತಿಯಲ್ಲಿ ಅರಸರು , ಹೆಗ್ಗಡೆಯವರು, ಗುತ್ತು , ಬಕೆðಯವರು ಹೀಗೆ ನಾನಾ ರೀತಿಯಲ್ಲಿ ವಿಂಗಡಿಸಲಾಗಿದೆ. ಇದರ ಕುರಿತಾದ ಅಧ್ಯಯನ ಅಗತ್ಯ ಎಂದು ಧರ್ಮಸ್ಥಳದ ಧಮಾðಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು.       ಅವರು ಉಜಿರೆಯ ಶ್ರೀ ಧ.ಮಂ ಪದವಿ ಕಾಲೇಜಿನ ಸಮ್ಯಕ್ ದರ್ಶನ ಸಭಾ ಭವನದಲ್ಲಿ  ಡಾ. ಹಾಮಾನ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಸಂಘದ ಸಹಯೋಗದೊಂದಿಗೆ ಹಂಪಿ ಕನ್ನಡ ವಿಶ್ವ ವಿದ್ಯಾನಲಯದ ಅಭೇರಾಜ್ ಬಲ್ಡೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ ಆಯೋಜಿಸಿರುವ ಕನಾðಟಕದ ಜೈನ ಅರಸುಮನೆತನಗಳು ಸಾಂಸ್ಕೃತಿಕ ಅಧ್ಯಯನ ಕುರಿತಾದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ಹಿಂದೂ ಸಂಸ್ಕೃತಿ ಹಾಗೂ ಜೈನ ಸಂಸ್ಕೃತಿಯ ಮಿಳಿತವಾಗಿದೆ ಇದರ ಕುರಿತ ಆಳ ಅಧ್ಯಯನ ಅಗತ್ಯ. ಜೈನ ಸಂಪ್ರದಾಯಗಳು ಅರಸು ಮನೆತನಗಳ ಕುರಿತು ಅಧ್ಯಯನ ಅಗತ್ಯ. ನಶಿಸಿಹೋಗುತ್ತಿರುವ ಅರಸರ ಮನೆತನದ ಉಳಿವಿಗಾಗಿ ಶ್ರಮಿಸಬೇಕು. ಈ ಕುರಿತ ನಮ್ಮ ಆಧ್ಯಯನದ ನೆಲೆ ಇರಬೇಕು. ದೇವಸ್ಥಾನಗಳಿಗೆ ಅರಸರ ಉಪಸ್ಥಿತಿ ಹಿಂದೆ ಅಗತ್ಯವಿತ್ತು. ಸಾಮಾಜಿಕವಾಗಿ ರಾಜಕೀಯವಾಗಿ ಧಾ«Äðಕ ವಿಚಾರದಲ್ಲಿ ಅರಸು ಮನೆತನದವರಿಗೆ ವಿಶೇಷ ಸ್ಥಾನಮನವಿತ್ತು. ಅಳಿವಿನಂಚಿನಲ್ಲಿರು ಅವರ ಮನೆತನಗಳ ಕುರಿತಾಗಿ ಸಂಶೋಧನೆ ನಡೆಯಬೇಕಿದೆ.    ಈ ಸಂದರ್ಭದಲ್ಲಿ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ. ಎನ್ ಚಿನ್ನಸ್ವಾಮಿ ಸೋಸಲೆ ರಚಿಸಿದ ಕನರ್ಾಟಕದಲ್ಲಿ ಶ್ವೇತಾಂಬರ ಜೈನ ಸಮಾಜ ಸಾಂಸ್ಕೃತಿ ಅಧ್ಯಯನ ಪುಸ್ತಕವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು  ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕನರ್ಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಉಜಿರೆ ಶ್ರೀಧ.ಮಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ ಎಸ್ ಪ್ರಭಾಕರ್, ಕವಿಹಂನ ಡೀನ್ ಡಾ ವಿಜಯ್ ಪುಣಚ್ಚ ತಂಬಂಡ ಉಪಸ್ಥಿತರಿದ್ದರು  ಡಾ. ಹಂಪ ನಾಗರಾಜಯ್ಯ ಆಶಯ ನುಡಿಗಳನ್ನು ನುಡಿದರು. ಡಾ. ಎನ್ ಚಿನ್ನಸ್ವಾಮಿ ಸೋಸಲೆ ಸ್ವಾಗತಿಸಿದರು  ಡಾ. ಕೆವಿ ನಾಗರಾಜಪ್ಪ ವಂದಿಸಿದರು ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
  • ಚಂದ್ರಶೇಖರ್ ಎಸ್ ಅಂತರ

Share The Posts

Twitter Delicious Facebook Digg Stumbleupon Favorites More